ಪ್ರಕೃತಿ

ಕಾಲರಾಯನ ಗರ್ಭದಿಂದ
ಸೀಳಿ ಬಂದೆನು ದೇಹದೊಡನೆ
ವೇಳೆ ಮುಗಿದರೆ ನಿಲ್ಲಲಾರೆನು
ತಾಳು ನಿನ್ನನ್ನು ನುತಿಪೆನು

ನನ್ನ ಹಿಂದಿನ ಸುಕೃತ ಫಲವೊ
ನಿನ್ನ ಕರುಣದ ಸಿದ್ಧಿಬಲವೊ
ಮಾನ್ಯ ಗುರು ಸರ್ವೇಶನೊಲವಿಂ
ಮಾನವತ್ವವ ಪಡೆದೆನು

ಮಾರುಹೋದೆನು ಜಗವ ನೋಡಿ
ಸೂರೆಗೊಂಡೆನು ಸುಧೆಯನಿಲ್ಲಿ
ಯಾರು ಅರಿಯದ ನಿನ್ನ ಕೃತಿಗಿದೊ
ಸರ್ವಶಕ್ತನೆ ಮಣಿವೆನು

ನಿತ್ಯವೆಂಬಾ ಜ್ಞಾನದೊಡನೆ
ಸತ್ಯವೆಂಬಾ ಸೊಡರ ಹೊತ್ತು
ನೂತ್ನ ನೂತನವಾಗಿ ಇಲ್ಲಿ
ಓಡುತಿರುವಳು ಪ್ರಕೃತಿಯು

ಯುಗ ಯುಗಂಗಳ ಸವರಿ ಬಂದು
ಬಗೆ ಬಗೆಯ ಸುದ್ದಿಗಳ ತಂದು
ಸಿಗದೆ ಯಾರನು ಲೆಕ್ಕಿಸದೆ ತಾ-
ನೋಡುತಿರುವಳು ಪ್ರಕೃತಿಯು

ಮಳೆಯ ರೂಪವನೊಮ್ಮೆ ತಾಳಿ
ಬೆಳೆಯ ಗುಣವನು ಒಮ್ಮೆ ತಾಳಿ
ಇಳೆಯ ಜೀವರನೆಲ್ಲ ಸಲಹುತ
ಓಡುತಿರುವಳು ಪ್ರಕೃತಿಯು

ಹರಿವ ಝರಿಗಳ ಮಾಲೆ ಧರಿಸಿ
ಧರೆಯ ತರುಗಳ ಪುಷ್ಪ ಮುಡಿದು
ಗಿರಿಯ ಧ್ವಜಗಳನೆತ್ತಿ ಹಿಡಿದು
ಓಡುತಿರುವಳು ಪ್ರಕೃತಿಯು

ಚೆನ್ನೆ ಚೆಲುವೆಯು ಜಗವ ಬೆಳಗಿ
ತನ್ನ ಬಾಹುಗಳೊಳಗೆ ಅಪ್ಪಿ
‘ಬನ್ನಿರೋ ನನ್ನೊಡನೆ’ ಎಂದು
ಓಡುತಿರುವಳು ಪ್ರಕೃತಿಯು

ಸ್ವರ್ಗ ನರಕವನಿಲ್ಲೆ ಸೃಜಿಸಿ
ಆರ್ಘವೆನಿಸುವ ಋತುವ ನಿಲಿಸಿ
ದಿಗ್ಗಜಂಗಳನೆಲ್ಲ ಬಳಸಿ
ಓಡುತಿರುವಳು ಪ್ರಕೃತಿಯು

ಸ್ನಿಗ್ಧಮಯದಾ ಒಡಲಿನೊಳಗೆ
ಪ್ರಾಜ್ಞರನು ಆದರದಿ ಹೊತ್ತು
ಸಗ್ಗದೂಟವ ಜಗಕೆ ಉಣಿಸುತ
ಓಡುತಿರುವಳು ಪ್ರಕೃತಿಯು

ಲಗ್ಗೆ ಎಬ್ಬಿಸುತೊಮ್ಮೆ ಕುಣಿದು
ನುಗ್ಗಿ ಜಯಿಸುತಲೊಮ್ಮೆ ನಲಿದು
ಅಗ್ನಿಜ್ವಾಲೆಯನೊಮ್ಮೆ ಉಗಿದು
ಓಡುತಿರುವಳು ಪ್ರಕೃತಿಯು

ಸಾರಸುಗುಣೆ ಸರ್ವಶಕ್ತ
ಧೀರೆ ಬಹು ಲಾವಣ್ಯಪೂತೆ
ಕಾರಣಾನ್ವಿತೆ ಅಂತ್ಯರಹಿತೆ
ಓಡುತಿರುವಳು ನಿರುತವು

ದೇವ ನಿನ್ನಯ ಸೃಷ್ಟಿಯೊಳಗೆ
ಆವ ಭಾಗವ ತಿಳಿಯಲಳವು
ಕೋವಿದನೆ ಈ ಪ್ರಕೃತಿ ಮಾತೆಗೆ
ಜನಕಜೆಯು ಕರ ಮುಗಿವಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಯಬಲ್ಲೆ ನಾ ಕೃಷ್ಣ
Next post ಲಾಲ್‌ಬಾಗ್

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys